ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 28, 2010

ಆಧ್ಯಾತ್ಮ-ವಿಜ್ಞಾನ

ಚಿತ್ರ ಋಣ : ಅಂತರ್ಜಾಲ
ಆಧ್ಯಾತ್ಮ-ವಿಜ್ಞಾನ

ಹಾರುವ ಮೊಲವನ್ನು ಕಂಡು
ಮೂರೇ ಕಾಲು ಎಂದರು !
ಬಾರಿ ಬಾರಿ ಸಾರಿ ಹೇಳೆ
ಯಾರೂ ಅರಿಯದಾದರು !

ಜಾರುವ ಬಂಡೆಯಮೇಲೆ
ಏರಬೇಡಿರೆಂದರೂ
ನೀರಪಸೆಯ ಕಂಡೂ ಕಂಡೂ
ದಾರಿತುಳಿದು ಬಿದ್ದರು !

ಊರ ಜನರ ಅಂಬೋಣಕೆ
ಮಾರಿಕೊಳ್ಳಬೇಡೆನೆ
ಖಾರವಾದ ಮಾತನಾಡಿ
ಹಾರಿ ಹಾಯ್ದುಬಂದರು

ಹಾರಿದಾ ವಿಮಾನವಿಳಿಯೆ
ಮಾರಜನಕ ದಯೆಯದು
ನೀರಿಗಿಳಿದ ಹಡಗು ಮರಳಿ
ದೂರದಡವ ಸೇರ್ವುದು !

ದಾರಿಕಂಡ ಋಷಿಮುನಿಗಳು
ಧಾರೆಯೆರೆದ ಜ್ಞಾನಕೇ
ಖಾರ-ಉಪ್ಪು-ಹುಳಿಯ ಹುಡುಕಿ
ತೋರಿಸೆಂಬ ನಿಲುವೇಕೆ ?

ಬೇರೆಯದೇ ಲೋಕವಿಹುದು
ತೂರಿಕೊಳ್ಳಲದರಲಿ
ಮೇರೆ ಮೀರಿದಂತ ಸುಖವು
ಭೂರಿಭೋಜನವಲಿ