ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 8, 2010

ಬಾಲ ಗಣೇಶ

ಇಡಗುಂಜಿ ಶ್ರೀ ಮಹಾಗಣಪತಿ


ಬೆಂಗಳೂರಿನ ದೊಡ್ಡ ಗಣಪತಿ


ದಗಡು ಸೇಥ್ ಹಲವಾಯಿ ಗಣಪತಿ, ಮುಂಬೈ [ಉತ್ಸವಕ್ಕಾಗಿ ಮಾತ್ರ ಪ್ರತಿಷ್ಠಾಪಿತ ]


ಬಾಲ ಗಣೇಶ
[ನಿಮಗೊಂದು ಮಂತ್ರವನ್ನು ಹಾಡಿನಲ್ಲೇ ತೋರಿಸಿಕೊಡುತ್ತಿದ್ದೇನೆ! ಇದು ಮಹಾಗಣಪತಿಗೆ ನಾನಿತ್ತ ಮೋದಕ ]

ಎಳೆಬಾಳೆಗಿಡಗಳಾ ಒಳಗಿನಾ ಮಂಟಪದಿ
ಹೊಳೆವ ಪೀತಾಂಬರದ ಗಣಪತಿಯು ಕುಳಿತು
ನಳಿನಮುಖಿಯರು ಎತ್ತಿ ಮಂಗಳವ ಬೆಳಗುತಿರೆ
ಕಳೆಯೆಂಥದದು ನೋಡಲೆರಡಕ್ಷಿ ಸಾಕೆ ?

ಮಳೆಯ ಮಾರುತಗಳವು ಕೊಳೆತೊಳೆದು ಈ ಭುವಿಯ
ಸೆಳೆತಂದು ಭಾದ್ರಪದ ರಂಗೋಲಿ ಬರೆದು
ಬಿಳಿಯುಡುಗೆ ಅರ್ಚಕರು ಸಡಗರದಿ ಓಡಾಡಿ
ಇಳೆಯಾಯ್ತು ಸ್ವರ್ಗದಾ ಇಂದ್ರನರಮನೆಯು!

ಬಳೆಯು ಅರಿಶಿನ ಕುಂಕುಮ ಅಕ್ಷತೆಗಳಿಟ್ಟು
ಸುಳಿದಿಟ್ಟ ಫಲವ ನಿವೇದಿಸಿ ಶ್ರೀಗೌರಿಗೆ
ಬಳಗ ಸಹಿತದ ನಮ್ಮ ಬಾಲಗಣೇಶನಿಗೆ
ಬೆಳಗುತಾ ಧೂಪ ದೀಪದಾರತಿಗಳ

ಒಳಗೆ ಧ್ಯಾನಿಸಿ ನಮ್ಮ ಮುನಿಜನರು ಇತ್ತಪದ
ಬೆಳೆವ ಮಹಾಗಣಪತಿಗೆ ’ಓಂ’ ಕಾರ ರೂಪ
ಬೆಳೆತೆಗೆದು ಕಡೆದಿರಿಸಿದಾಮಂತ್ರ ’ಗಂ’ ಕಾರ
ನಳನಳಿಸುತ್ತಿರುವ ಬೆನಕ ’ಗ’ಜಮುಖಗೆ

ಘಳಿಗೆಯಲಿ ಶಿವನಿತ್ತ ಗಣನಾಯಕನ ಸ್ಥಾನ
ಅಳಿವಿರದ ಬಾಲಕನ ಅ’ಣ’ಕಿಸುತ ಮೊದಲು
ಬಳುವಳಿಯು ವಿವಿಧ ಬಂದಿತ್ತಲ್ಲಿ ಗಣ’ಪ’ನಿಗೆ
ಒಳಿತಾಯ್ತು ಕರಿಕೊಮೊಗದ ಅ’ತ’ರಾಸ ಪ್ರಿಯಗೆ

ಬಳಿದು ದೃಷ್ಟಿಯನಲ್ಲಿ ನಿವಾಳಿಸುತ ಎಸೆ’ಯೇ’
ನಳಿದೋಳುಗಳ ನೀವಿ ಓಕುಳಿಯ ಹಾ’ನ’
ಗೆಳೆಯದೇವರ ದಂಡು ಘೋಷಿಸಿತು ಆದ್ಯತೆಯ
ಬಳಿಸಾರಿ ಸುಮುಖನಿಗೆ ಜಯ ನಮೋ ನ’ಮಃ’

ಓದುಗ ಮಿತ್ರರೇ ಗಣಪತಿಯೇ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕೇ ? ಆತನ ವಿಗ್ರಹ ತರುವಾಗ ಶುರುವಾಗುವ ಆ ಆಪ್ತತೆ ವಿಗ್ರಹ ವಿಸರ್ಜನೆಯೇ ಬೇಡ ಎನಿಸುವಷ್ಟರ ಮಟ್ಟಿಗೆ ಹಬ್ಬುತ್ತದೆ, ಆದ್ರೂ ಅದು ನಡೆಸಲೇ ಬೇಕಾದ ವಿಧಿವಿಧಾನ, ಅನಿವಾರ್ಯ.
ತಮಗೆಲ್ಲ ಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ,
ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯಗಳು

ಗೌರೀ ಗಣೇಶ ಹಬ್ಬದ ಪ್ರಯುಕ್ತ 'ನಿಮ್ಮೊಡನೆ ವಿ.ಆರ್.ಭಟ್ ' ಕಾರ್ಯಾಲಯಕ್ಕೆ ೧೪ ನೇ ತಾರೀಕಿನ ವರೆಗೆ ರಜಾ ಇರುತ್ತದೆ, ೧೫ ರಿಂದ ಮತ್ತೆ ಎಂದಿನಂತೆ ಮುಂದುವರಿಯುತ್ತದೆ. ಅಲ್ಲಿಯವರೆಗೆ ನನ್ನ ಹಳೆಯ ಕೃತಿಗಳನ್ನು ಇಷ್ಟಪಡುವವರು ಓದಬಹುದು, ಈ ಬ್ಲಾಗಿನಲ್ಲಿ ಪ್ರಾರಂಭವಾದ ೯ ತಿಂಗಳಲ್ಲಿ ಇದು ಇನ್ನೂರನೇ ಕೃತಿ !