ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, July 28, 2010

ಹೊಲಸು ಹೊರುವರು ನಾವು !!



ಹೊಲಸು ಹೊರುವರು ನಾವು !!

[ಇಂದಿನ ರಾಜಕೀಯದ ಜನರ ಕುರಿತು, ಅವರನ್ನು ಆಯ್ದು ಕಳಿಸಿದ ನಮ್ಮ ಮಂಕು ಬುದ್ಧಿಯ ಕುರಿತು ಈ ವಿಪ್ಲವದ ಕವನ]

ಹೊಲಸು ತುಂಬಿದ ಬುಟ್ಟಿ
ಹೊತ್ತು ನಾವೀವತ್ತು
ಕಳೆಗುಂದಿ ಕುಳಿತಿಹೆವು ಮಂಗನಂತೆ !
ಕಳಿಸುವಾಗಿರಲಿಲ್ಲ
’ತಲೆ’ ನಮಗೆ ತಲೆಯಲ್ಲಿ
ಬಿಳಿಹಂದಿ ಆನೆಗಳು ಬೆಳೆದವಂತೆ!

ಹಳೆಯ ಪೈಜಾಮಿನಲಿ
ಹಲವತ್ತುಕೊಳುತಾಗ
ಬಂದಿದ್ದ ಹಲವರನು ನಾನು ಕಂಡೆ
ಕಳೆಕಳೆಯ ಹೊಸ ವೇಷ
ಹೊಸ ಭಾಷೆ ಹೊಸ ಬದುಕು
'ಬಂದಿದ್ದು ಏಕೆಂಬ' ಮಾತನುಂಡೆ!

ಇಪ್ಪತ್ತು ಅಂಶಗಳ
ಜನಸೇವೆ ತಮದೆನುತ
ಒಪ್ಪತ್ತು ಊಟಕ್ಕೂ ಸೈ ಎಂದರಾಗ
ಒಪ್ಪುತ್ತ ಭೂರಮೆಯ
ಭಾರ ಕಳೆಯುವೆವೆಂದು
ತಪ್ಪುದಾರಿಗೆ ಎಳೆದು ಬದಲಿಸುತ ರಾಗ !

ಜನತೆ ಸುಖಿಸುವುದಕ್ಕೆ
ಘನಥರದ ಕಾರ್ಯಗಳ
ಮನವಿಟ್ಟು ಮಾಡುವುದು ಅವರಿತ್ತ ವಚನ
ಘನತೆಗಪ್ಪುದು ಕುಂದು
ಗಣಿಧಣಿಗಳಿಲ್ಲದಿರೆ
ಗಹನವಾಗಿದೆ ಗಾತ್ರ ಆಗಿಲ್ಲ ಪಚನ !

ಮನುಕುಲದ ಮುನ್ನಡೆಗೆ
ತನುಮನದ ಸಹಕಾರ
ಕನವರಿಸಿ ನಡೆಸುವೆವು ಕಾಲ್ನಡಿಗೆಯೆನುತ
ಅನುಕೂಲಕೊಂದು ಥರ
ಜನಜಾತ್ರೆ ಹೊಮ್ಮಿಸುತ
ತನುಕುಣಿಸಿ ಕೈ ತೋರಿ ಹಲವಾರು ಕುಣಿತ !

ಸೌಧದಲಿ ಸಭೆಗಳಲಿ
ವಾದ ಮಂಡಿಸುವಾಗ
ಬಾಧಿಸುವುದವುಗಳಿಗೆ ಅಸಹ್ಯ ರೋಗ !
ಕೌದಿ ಹೊದ್ದುದ ಮರೆತು
ಬೈದಾಡಿ ಕಬ್ಬರಿದು
ಕಾದಾಟನಡೆಸಿ ಸಭ್ಯತೆಮರೆವರಾಗ

ನಮ್ಮನಾಳುವ ಜನಕೆ
ಬಿಡಲೊಮ್ಮೆ ಬಾಣವನು
ಇರುತಿಲ್ಲ ನಮ್ಮಕಡೆ ಸಿದ್ಧ ಬತ್ತಳಿಕೆ
ತಿಮ್ಮ ಯಂಕರ ಕರೆದು
ಭುಜ ತಟ್ಟಿ ಹೊಗಳುವರು
ಬರುತಿಲ್ಲ ನಮಗೆಲ್ಲ ಬುದ್ಧಿ ಯಾತಕ್ಕೆ ?